ನೀರಿನ ಮಟ್ಟ ಕುಸಿತ: ಕೆಆರ್ಎಸ್, ಕಬಿನಿ ಜಲಾಶಯ ಖಾಲಿ ಖಾಲಿ...!
ಮೈಸೂರು: ಬೇಸಿಗೆಯ ಪ್ರಖರತೆ ಹೆಚ್ಚಳವಾಗುತ್ತಿದ್ದಂತೆ ಮೈಸೂರು ಭಾಗದ ಜನರ ಎದೆಯಲ್ಲಿ ಈಗ ನಡುಕ ಶುರುವಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿನ ದಾಹ ತಣಿಸುವ, ರೈತರ ಪಾಲಿನ ಕಾಮಧೇನು ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಲ್ಲಿ ನೀರಿನ ಮಟ್ಟ ಭೀತಿ ಹುಟ್ಟಿಸುವಷ್ಟು ಕುಸಿದಿದೆ. ಅತ್ತ ಮಳೆರಾಯ ಅಲ್ಲಲ್ಲಿ ದರ್ಶನ ನೀಡುತ್ತಿದ್ದರೂ, ಜಲಾಶಯಗಳ ಒಳಹರಿವು ಕಡಿಮೆಯಾಗಿದೆ . 2026ರ ಆರಂಭದಲ್ಲಿ ಭರ್ತಿಯಾಗಿದ್ದ ಕೆಆರ್ಎಸ್ ಅಣೆಕಟ್ಟು ಈಗ ಸೊರಗುತ್ತಿದೆ. 124.80 ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ ಈಗ ಇರೋದು ಕೇವಲ 104.64 ಅಡಿ ನೀರು ಮಾತ್ರ. ಅಚ್ಚರಿಯ ವಿಷಯವೆಂದರೆ, ಜಲಾಶಯಕ್ಕೆ ಕೇವಲ 165 ಕ್ಯೂಸೆಕ್ಸ್ ನೀರು ಒಳಹರಿವು ಬರುತ್ತಿದ್ದರೆ, ಹೊರಹರಿವು ಮಾತ್ರ ಬರೋಬ್ಬರಿ 4308 ಕ್ಯೂಸೆಕ್ಸ್ ತಲುಪಿದೆ. ಅಂದರೆ, ಬರುವ ನೀರಿಗಿಂತ ಹೋಗುವ ನೀರೇ ಸಾವಿರ ಪಟ್ಟು ಹೆಚ್ಚು. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಬರುವುದು ನಿಶ್ಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಹೆಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯದ ಪರಿಸ್ಥಿತಿಯೂ ಕೆ ಆರ್ ಎಸ್ ಭಿನ್ನವಾಗಿಲ್ಲ. 2284 ಅಡಿ ಸಾಮರ್ಥ್ಯದ ಅಣೆಕಟ್ಟೆಯಲ್ಲಿ ಈಗ ಕೇವಲ 2265.52 ಅಡಿ ನೀರು ಬಾಕಿ ಉಳಿದಿದೆ. ಇಲ್ಲಿಗೆ ಕೇವಲ 109 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದರೆ, ಹೊರಕ್ಕೆ 1500 ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ. ಮಳೆ ಬಾರದಿದ್ದರೆ ಪರಿಸ್ಥಿತಿ ಕೈಮೀರುವ ಲಕ್ಷಣಗಳು ಗೋಚರಿಸುತ್ತಿವೆ.
ಇತರೆ ಸುದ್ದಿಗಳು